ಬಿ.ಬಾಲಚಂದ್ರ ರಾವ್ (೧೯೪೫ ರ ಏಪ್ರಿಲ್ ೧೫-೨೦೨೦ ರ ಅಕ್ಟೋಬರ್,೧೮) ಸುಪ್ರಸಿದ್ದ ರಂಗ ಕರ್ಮಿ, ನಾಟಕಕಾರ, ನಿರ್ದೇಶಕ, ನಟ, ಮುಂಬಯಿನಗರ ತುಳು ಕನ್ನಡಿಗರ ಹಲವಾರು ಸಂಘ ಸಂಸ್ಥೆಗಳ ಸಕ್ರಿಯ ಸಂಘಟಿಕರ ಪೂರ್ಣ ಹೆಸರು, ಬೈಲೂರು ಬಾಲಚಂದ್ರ ರಾವ್ ಎಂದು. == ಬಾಲ್ಯ,ಪರಿವಾರ,ಶಾಲಾ ಶಿಕ್ಷಣ == ಬಾಲ ಚಂದ್ರ, ಕಾರ್ಕಳ ತಾಲ್ಲೂಕಿನ ಬೈಲೂರಿನಲ್ಲಿ ೧೯೪೫ ರ ಏಪ್ರಿಲ್ ೧೫, ರಂದು ಜನಿಸಿದರು. ತಂದೆ ಜಮೀನ್ದಾರ್, ಬೈಲೂರು ಲಕ್ಷ್ಮೀ ನಾರ್ಯನ ರಾವ್, ತಾಯಿ ಜಲಜಾಕ್ಷಮ್ಮ. ಒಕ್ಕಲಿನವರಿಂದ ಬರುತ್ತಿದ್ದ ಗೇಣಿ ಅಕ್ಕಿಯಿಂದ ಜೀವನ ನಿರ್ವಹಣೆ. ಜೇನು ವ್ಯವಸಾಯ, ಬಾಲಚಂದ್ರ ಚೊಚ್ಚಲ ಮಗು. ಇವರ ದೊಡ್ಡ ಅಕ್ಕ ಸಂಘ ಸಂಸ್ಥೆಗಳಲ್ಲಿ ಹೋಗಿ ಸೇವೆಮಾಡುವ ಪರಿಪಾಠವಿಟ್ಟುಕೊಂಡಿದ್ದರು. ಬಾಲಕ ಬಾಲಚಂದ್ರ ಅಕ್ಕನಿಂದ ಪ್ರೇರಣೆ ಪಡೆದು ತಾನೂಸಂಘ ಸಂಸ್ಥೆಗಳಿಗೆ ಹೋಗುವ ಅಭ್ಯಾಸ ಮಾಡಿಕೊಂಡನು. 'ಗಾಂಧಿ ಕ್ಲಬ್'ನ ವಾಚನಾಲಯದಲ್ಲಿ ಕುಳಿತು ರೇಡಿಯೋ ಕೇಳುವುದು, ಇತ್ಯಾದಿ ಅಭ್ಯಾಸವಾಯಿತು. ನೀರೆ ಬ್ರಾಂಚ್ ಸ್ಕೂಲ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಹಾಡುವುದು ಅವರ ಪ್ರೀತಿಯ ಹವ್ಯಾಸಗಳಲ್ಲೊಂದಾಗಿತ್ತು. ನಿಧಾನವಾಗಿ ಬಾಲಚಂದ್ರರು ಆ ಶಾಲೆಯಲ್ಲಿ ಪ್ರಸಿದ್ಧರಾದರು. ರಾಮಯ್ಯ ಮಾಸ್ಟರ್ ಅವರಿಗೆ ನಾಟಕ ಕಲೆಯನ್ನು ಕಲಿಸಿ ಪ್ರೋತ್ಸಾಹಿಸಿದರು. ಹೀಗೆ ಪ್ರೋತ್ಸಾಹಿಸಿದವರಲ್ಲಿ ದಮಯಂತಿ ಟೀಚರ್ ಮತ್ತೊಬ್ಬ ಶಿಕ್ಷಕಿ. ಬಾಲಚಂದ್ರ ಅವರಿಗೆ ಸಂಗೀತದ ಗುರು ಅಚ್ಯುತ್ ಮಾಸ್ಟರ್. ೫ ನೆಯ ತರಗತಿ ಮುಗಿಯುವುದರಲ್ಲಿ ಬಾಲಚಂದ್ರರು ಬಹುಮುಖ ಪ್ರತಿಭಾನ್ವಿತರಾಗಿದ್ದರು. ಆಗತಾನೆ ರೂಪುಗೊಂಡಿದ್ದ ಗಾಂಧಿ ಶಾಲೆಯಲ್ಲಿ ಪ್ರೌಢ ಶಾಲಾ ವಿದ್ಯಾಭ್ಯಾಸ ನಡೆಯಿತು. ಬೆಳ್ಳಾರೆ ನಾರಾಯಣ ರಾವ್ ಆಗ ಮುಖ್ಯೋಪಾಧ್ಯಕರಾಗಿದ್ದರು. ಅವರು ಬಾಲಚಂದ್ರನಿಗೆ ಸಹಾಯಮಾಡಿದರು.ವಿದ್ಯಾರ್ಥಿವೇತನ ಗಳಿಸಿದರು. == ಶಾಲಾ ವಾರ್ಷಿಕೋತ್ಸವಗಳಲ್ಲಿ == ಸಂಗೀತ ಸ್ಪರ್ಧೆ, ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆಗಳಲ್ಲಿ ಮುಂಚೂಣಿಯಲ್ಲಿ ಭಾಗವಹಿಸಿ ಅನೇಕ ಪಾರಿತೋಷಕಗಳ ವಿಜೇತರಾಗಿದ್ದರು. ಶಾಲೆಯ ವಾರ್ಷಿಕೋತ್ಸವದಲ್ಲಿ 'ಛಾಯಾ' ಎಂಬ ಹಿಂದಿ ನಾಟಕದಲ್ಲಿ ಛಾಯಾ ಸ್ತ್ರೀ ಪಾತ್ರವಹಿಸಿದ್ದರು. ಅದಕ್ಕೆ ಪ್ರಥಮ ಬಹುಮಾನ ದೊರಕಿತು. ಉಮೇಶ್ ಮತ್ತು ಗೋಕುಲ್ ದಾಸ್ ಈ ನಾಟಕದ ನಿರ್ದೇಶಕರು. ತದನಂತರ ಪ್ರತಿವರ್ಷದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗಳಿಸುತ್ತಿದ್ದರು. ಶಾಲಾ ಪಾರ್ಲಿಮೆಂಟ್ ನಲ್ಲಿ ಶಿಕ್ಷಣ ಮಂತ್ರಿಯಾಗಿದ್ದರು. ತಾಲ್ಲೂಕು ಮಟ್ಟದಲ್ಲಿ ಆಯೋಜಿಸಿದ್ದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದರು. ಗೋವಿಂದ್ ಪೂಜಾರಿ (ಕನ್ನಡ ಪಂಡಿತರು) ಎಸ್ ಆರ್. ಆಚಾರ್ (ಮುಖ್ಯೋಪಾಧ್ಯಾಯರು) ಬಾಲಚಂದ್ರರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ತರಬೇತಿ ನೀಡಿದರು. ಎಸ್.ಎಸ್.ಎಲ್.ಸಿ.ಯ ನಂತರ ಉಡುಪಿಯ ಎಂ.ಜಿ.ಎಂ. ಕಾಲೇಜಿಗೆ ಸೇರಿ, ಪಿ.ಯು.ಸಿ. ಪರೀಕ್ಷೆಯನ್ನು ಮುಗಿಸಿದರು. ಕರ್ನಾಟಕ ಪಾಲಿಟೆಕ್ನಿಕ್ ನಲ್ಲಿ ಮೆಕಾನಿಕಲ್ ಎಂಜಿನಿಯರಿಂಗ್ ಡಿಪ್ಲೋಮಕ್ಕೆ ಸೇರಿದರು. ಅಲ್ಲಿಯೂ ಪಾಲಿಟೆಕ್ಣಿಕ್ ನ ಮುಖ ಪತ್ರಿಕೆಯಲ್ಲಿ ಸಂಪಾಕ ಮಂಡಳಿಯ ಸದಸ್ಯರಾಗಿ, ಕವನ, ಲೇಖನಗಳನ್ನು ಬರೆಯುತ್ತಿದ್ದರು. ತುಳು, ಕನ್ನಡ ಭಾಷೆಗಳಲ್ಲಿ ನಾಟಕಗಳಲ್ಲಿ ಪಾತ್ರವಹಿಸಿ, ನಾಟಕಗಳಿಗೆ ಗೀತೆಗಳನ್ನು ರಚಿಸಿಕೊಟ್ಟರು.ವೆಂಕಟ್ರಾವ್ ಐತಾಳ್ ಎಂಬ ಶಿಕ್ಷಕರು ನಿರ್ದೇಶಿಸಿದ ನಾಟಕದಲ್ಲಿ ಯಕ್ಷಗಾನದಲ್ಲೂ ಸ್ತ್ರೀ ಪಾತ್ರಮಾಡಿ ಪ್ರಾಂಶುಪಾಲ ಶಾಸ್ತ್ರಿಯವರ ಪ್ರಸಂಶೆಗೆ ಪಾತ್ರರಾದರು. == ವೃತ್ತಿ ಜೀವನ == ಊರಿನಲ್ಲಿ ಡಿಪ್ಲೋಮ ಪರೀಕ್ಷೆ ಮುಗಿಸಿದಮೇಲೆ ಬಾಲಚಂದ್ರರು, ಬೆಂಗಳೂರಿನಲ್ಲಿ ಕಂಪೆನಿಯೊಂದರಲ್ಲಿ ದುಡಿದು ಮುಂದೆ ಅವರು ಮುಂಬಯಿ ನಗರಕ್ಕೆ ಪಾದಾರ್ಪಣೆ ಮಾಡಿದರು ಎಕ್ಸೆಲ್ಲೋ ಎಂಬ ಕಂಪೆನಿಯಲ್ಲಿ ೩ ವರ್ಷ ದುಡಿದು ನೇವಲ್ ಡಾಕ್ ಯಾರ್ಡ್ ನಲ್ಲಿ ಇಂಜಿನಿಯರ್ ಆಗಿ ಸೇರಿದರು ತಮ್ಮ ೨೯ ನೆಯ ವಯಸ್ಸಿನಲ್ಲಿ ಪ್ರಭಾವತಿ ಎಂಬ ಯುವತಿಯೊಂದಿಗೆ ಮದುವೆಯಾದರು. ನೇವಿಯಲ್ಲೇ ಅವರಿಗೆ ಕ್ವಾರ್ಟರ್ಸ್ ದೊರೆಯಿತು. ಅಲ್ಲಿಯೂ ತಮ್ಮ ಪರಿಣಿತಿಗೆ ಸರಿಹೊಂದಿದ ಹಲವಾರು ಉಪಕರಣಗಳು ಮತ್ತು ಉಪಯುಕ್ತ ಡಿಸೈನ್ ಗಳನ್ನು ನಿರ್ಮಿಸಿ ಹಿರಿಯ ಅಧಿಕಾರಗಳ ಪ್ರೀತ್ಯಾದರಗಳಿಗೆ ಪಾತ್ರರಾದರು. ೧೯೭೦ ರ ಪಾಕಿಸ್ಥಾನ್ ಸಮರ, ಕಾರ್ಗಿಲ್ ಯುದ್ಧ,ಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಒಮ್ಮೆ ೧೫೪ ಸಣ್ಣ ಹಡಗುಗಳನ್ನು ದುರಸ್ತಿ ಮಾಡಿ, ಯುದ್ಧದ ಸಮಯಕ್ಕೆ ತಯಾರುಮಾಡಿಕೊಟ್ಟ ತಂಡದಲ್ಲಿ ಅವರು ದುಡಿದರು. 'ವೆಸ್ಟರ್ನ್ ನೇವಲ್ ಕಮಾಂಡ್'ನಿಂದ ಯುದ್ಧದ ಸಮಯದಲ್ಲಿ ಮಾಡಿದ ಅತ್ಯುತ್ತಮ ಸೇವೆಯನ್ನು ಪರಿಗಣಿಸಿ, ಅತ್ಯುತ್ತಮ ಆಫೀಸರ್ ಪ್ರಶಸ್ತಿ, ಪೂರ್ವಿ ಸ್ಟಾರ್, ಪಶ್ಚಿಮಿ ಸ್ಟಾರ್, ಎಂಬ ಪದಕಗಳು ದೊರೆತವು. ೩೬ ವರ್ಷಗಳ ಸತತ ಸೇವೆಯನ್ನು ಮುಗಿಸಿ ಉನ್ನತಾಧಿಕಾರಿಯ ಸ್ಥರದಲ್ಲಿದ್ದ ಬಾಲಚಂದ್ರರು ೨೦೦೫ ರಲ್ಲಿ ನಿವೃತ್ತರಾದರು. ನೇವಿಯಲ್ಲಿ ಅವರು ಮಾಡಿದ ಕೆಲಸ ಅವರ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲವಾಯಿತು. ಪತ್ನಿ ಪ್ರಭಾವತಿ ರಾವ್,ಕನ್ನಡ ಶಾಲೆಯಲ್ಲಿ ಅಧ್ಯಾಪಕಿಯಾಗಿ ೨೬ ವರ್ಷ ಸೇವೆಸಲ್ಲಿಸಿದ್ದಾರೆ. ಮಗಳು ಅನುಪ್ರಿಯಾ, ಭರತ ನಾಟ್ಯ ಪ್ರವೀಣೆ, ಮತ್ತು ಗಾಯಕಿ. ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್. ಮಗ ವೃತ್ತಿಯಲ್ಲಿ ಇಂಜಿನಿಯರ್, ಒಳ್ಳೆಯ ತಬ್ಲಾ ವಾದಕ, ನವಿ ಮುಂಬಯಿನಲ್ಲಿ ಸಂಗೀತ ಶಾಲೆಯನ್ನು ನಡೆಸುತ್ತಿದ್ದಾನೆ. == ಸಮಾಜ ಸೇವೆಯಲ್ಲಿ == ಶ್ರೀ ಸುಬ್ರಮಣ್ಯ ಸೇವಾ ಸಂಘ, ಬಿ.ಎಸ್.ಕೆ.ಬಿ. ಅಸೋಸಿಯೇಷನ್, ಚುಟುಕು ಸಾಹಿತ್ಯ ಪರಿಷತ್ ಕನ್ನಡಿಗ ಕಲಾವಿದರ ಪರಿಷತ್, ಕನ್ನಡ ಕಾಲ ಕೇಂದ್ರ, ಕನ್ನಡ ಸಂಘ (ನವಿ ಮುಂಬಯಿ) ನವಿ ಮುಂಬಯಿನ ಕನ್ನಡ ಸಂಘದಲ್ಲಿ ಬಾಲಚಂದ್ರರು ಸದಸ್ಯ, ಪದಾಧಿಕಾರಿ, ಮೊದಲಾದ ಹುದ್ದೆಗಳಲ್ಲಿ ಸುಮಾರು ೬ ದಶಕಗಳಿಂದ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಸಾಂಸ್ಕೃತಿಕ ಚಟುವಟಿಕೆಗಳಾದ ಸಂಗೀತ, ನೃತ್ಯ, ನಾಟಕ, ಯಕ್ಷಗಾನಗಳನ್ನೂ ನಿರಂತರವಾಗಿ ಆಯೋಜಿಸುತ್ತಾ ಮುಂಬಯಿಯ ತುಳು ಕನ್ನಡಿಗರ ಪರಿಚಿತ ಸಂಘಟಕರಾಗಿ ದುಡಿಯುತ್ತಿದ್ದಾರೆ. == ಗೋಕುಲ ಕನ್ನಡ ಸಂಸ್ಥೆ == ಬಾಲ ಚಂದ್ರರಾವ್, ಒಬ್ಬ ನಟ, ನಾಟಕಕಾರ, ನಿರ್ದೇಶಕರಾಗಿ ಸುಮಾರು ೧೦೦ ಕ್ಕೂ ಮಿಗಿಲಾಗಿ ನಾಟಕಗಳಲ್ಲಿ ಪಾತ್ರವಹಿಸಿ ೫೦ ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಗೋಕುಲ ಪತ್ರಿಕೆಯ ಸಂಪದಕ ಮಂಡಳಿಯಲ್ಲಿ ಸರ್ಕ್ರಿಯರಾಗಿ ಕೆಲಸಮಾಡುತ್ತಿದ್ದದ್ದಾರೆ. ಹಾಸ್ಯ ಲೇಖನ ಪ್ರವಾಸ ಲೇಖನ,ಚುಟಕಗಳು, ಸ್ಥಳ ಪುರಾಣಗಳು ಇತ್ಯಾದಿ ೧೨ ನಾಟಕಗಳನ್ನು ರಚಿಸಿ ದಿಗ್ದರ್ಶಿಸಿದ್ದಾರೆ. ಪುರಂದರ ದಾಸ, ಕನಕದಾಸ,ಪರೋಪಕಾರ, ಒಂದಾಗಿ ಬಾಳೋಣ, ಕರ್ನಾಟಕ ದಾದ್ಯಂತ ನೂರಾರು ಪ್ರದರ್ಶಗಳನ್ನು ಕಂಡಿವೆ. ಹಿರಿಯ ನಾಟಕಕಾರ, ದಿಗ್ದರ್ಶಕ ವೆಂಕಟರಾವ್ ತಲಗೇರಿ, ದಿ.ಕೆ.ಜೆ.ರಾವ್, ದಿ. ಶ್ರೀಪತಿ ಬಲ್ಲಾಳ್, ದಿ ಆರ್.ಡಿ.ಕಾಮತ್, ದಿ. ಶಂಕರ ನಾರಾಯಣ ರಾವ್, ದಿ ವ್ಯಾಸರಾವ್, ಮೊದಲಾದವರ ಜೊತೆಯಲ್ಲಿ ನಟಿಸಿ, ನಂತರ ಸ್ವತಃ ನಾಟಕಗಳನ್ನು ದಿಗ್ದರ್ಶಿಸಿ, ಒಬ್ಬ ಉತ್ತಮ ರಂಗತಜ್ಞ ರೆಂದು ಸಾಬೀತುಪಡಿಸಿದ್ದಾರೆ. === ಹಿರಿಯ ನಾಟಕಕಾರರ ಜೊತೆ === ಹಿರಿಯ ನಾಟಕಕಾರರು, ದಿಗ್ದರ್ದರ್ಶಕರ ಜೊತೆ ಬಾಲಚಂದ್ರ ರಾವ್ ಅಭಿನಯಿಸಿದ್ದಾರೆ. ದಿವಂಗತ ವೆಂಕಟರಾವ್ ತಲಗೇರಿ ದಿವಂಗತ ಶ್ರೀಪತಿ ಬಲ್ಲಾಳ್, ದಿವಂಗತ ಆರ್.ಡಿ.ಕಾಮತ್, ದಿವಂಗತ ಶಂಕರ್ ನಾರಾಯಣ ರಾವ್, ದಿವಂಗತವ್ಯಾಸರಾವ್ ದಿವಂಗತ ಕೆ.ಜೆ.ರಾವ್ === ಗುರು ಕೆ.ಜೆ.ರಾವ್ ಜೊತೆ === ಬಾಲಚಂದ್ರರಿಗೆ ಮಹತ್ವದ ತರಪೇತಿ ಮತ್ತು ಪ್ರೋತ್ಸಾಹ ಕೊಟ್ಟವರು ಮುಂಬಯಿನಗರದ ಹೆಸರಾಂತ ರಂಗ ನಿರ್ದೇಶಕ ಕೆ.ಜೆ.ರಾಯರು. ಹೀಗೆ ಬಾಲಚಂದ್ರರು ಮುಂದೆ ಬೆಳೆದು ನಾಟಕ ರಂಗದ ಎಲ್ಲಾ ವಿಭಾಗಗಳಲ್ಲೂ ನಿಷ್ಣಾತರಾಗಿದ್ದಾರೆ. ಕೆ.ಜೆ.ರಾಯರ ಅಡಿಯಲ್ಲಿ ಕೆಳಗೆ ನಮೂದಿಸಿರುವ ನಾಟಕಗಳಲ್ಲಿ ಬಾಲಚಂದ್ರರು ಅಭಿನಯಯಿಸಿದ್ದಾರೆ. ಕೀಚಕ ಸತ್ಸಂಗ ಧರ್ಮಂಚರ ನಟ ಸಾಮ್ರಾಟ್ ಕಪ್ಪು ದ್ವೀಪ ಕೆಂಪು ದೀಪ == ಕನ್ನಡ ಕಲಾ ಕೇಂದ್ರ == ೧೨ ವರ್ಷಗಳಿಂದ ಕನ್ನಡ ಕಲಾ ಕೇಂದ್ರದ ಅಧ್ಯಕ್ಷರಾಗಿರುವ ಬಾಲಚಂದ್ರ ರಾಯರು, ನಾಟಕೋತ್ಸವ,ಯಕ್ಷೋತ್ಸವ, ರಂಗ ತರಪೇತಿ ಶಿಬಿರ, ರಂಗ ಯಕ್ಷಗಾನ ಶಿಬಿರ ಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ಅವರು ಸುಮಾರು ೨೦೦ ಕ್ಕೂ ಹೆಚ್ಚು ಕಲಾವಿದರನ್ನು (ನಟರು/ನಟಿಯರು) ಬೆಳಕಿಗೆ ತಂದಿದ್ದಾರೆ. ಪ್ರತಿವರ್ಷವೂ ಕನ್ನಡ ಕಲಾ ಕೇಂದ್ರದಿಂದ ಸಂಗೀತ, ನಾಟಕ, ನೃತ್ಯ, ಯಕ್ಷಗಾನ ಕಲೆಯ ಉತ್ತಮ ಕಲಾವಿದರನ್ನು ಗುರುತಿಸಿ ಹಿರಿಯ ರಂಗ ಚೇತನಗಳ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುತ್ತಾ ಬಂದಿದ್ದಾರೆ. === ಬಾಲಚಂದ್ರ ಬೈಲೂರ್ ಬರೆದು ನಿರ್ದೇಶಿಸಿದ ನಾಟಕ === ಶ್ರೀ ಆದಿ ಶಂಕರಾಚಾರ್ಯ. ಈ ಮಹತ್ವದ ನಾಟಕ ಕರ್ನಾಟಕದ ಪ್ರಮುಖ ನಗರಗಳಲ್ಲಿ ಪ್ರದರ್ಶನಗೊಂಡು, ಕರ್ನಾಟಕ ಸರ್ಕಾರದ ಮಾನ್ಯತೆ ಗಳಿಸಿದೆ. ಒಟ್ಟಾರೆ ರಾಯರಿಗೆ ಸಂದ ಪ್ರಶಸ್ತಿಗಳ ಸಂಖ್ಯೆ ೧೮. == ಪ್ರಶಸ್ತಿಗಳು == ಕರ್ನಾಟಕ ನಾಟಕ ಅಕ್ಯಾಡೆಮಿಯ ಜೀವಮಾನ ರಂಗಸಾಧನೆ ಪ್ರಶಸ್ತಿ, ಎಂ.ಏನ್.ಮಾಸೂರು ಪ್ರಶಸ್ತಿ, ಕೆ.ಕೆ.ಸುವರ್ಣ ಸ್ಮಾರಕ ಪ್ರಶಸ್ತಿ, ರಂಗಸಂಪದ ಪ್ರಶಸ್ತಿ, ಕರ್ನಾಟಕ ರಂಗ ಭೂಮಿ ಸೇವಾ ರತ್ನ ಪ್ರಶಸ್ತಿ, ಕನ್ನಡ ಸಾಹಿತ್ಯ ಸಮ್ಮೇಳನ ಪ್ರಶಸ್ತಿ, ಯಕ್ಷ ರಕ್ಷಾ ಪ್ರಶಸ್ತಿ, ದೆಹಲಿ ಕನ್ನಡಿಗ ಪ್ರಶಸ್ತಿ, ಸುವರ್ಣ ಕಲಾರತ್ನ ಪ್ರಶಸ್ತಿ, ಸಮಾಜಸೇವಾ ಪ್ರಶಸ್ತಿ, == ೭೫ ರ ಸಂಭ್ರಮ == ಮುಂಬಯಿ ಮಹಾನಗರದ ಖ್ಯಾತ ನಾಟಕಕಾರ, ನಿರ್ದೇಶಕ, ರಂಗ ತಜ್ಞರಲ್ಲೊಬ್ಬರಾಗಿರುವ ೭೫ ರ ಹರೆಯದ ಬೈಲೂರು ಬಾಲಚಂದ್ರ ರಾಯರಿಗೆ, 'ಅಮೃತಮಹೋತ್ಸವ' ಮುಂಬಯಿ ನಗರದ ಹಲವಾರು ಸಂಘ ಸಂಸ್ಥೆಗಳ ಜೊತೆ ಬಂಟರ ಸಂಘದ ರಾಧಾಬಾಯಿ ಭಂಡಾರಿ ಸಭಾಗೃಹದಲ್ಲಿ, ೧೭ ನವೆಂಬರ್, ೨೦೧೯ ರಂದು ಮದ್ಯಾನ್ಹ ೨ ರಿಂದ ೯ ರ ವರೆಗೆ ನಡೆಯಲಿದೆ. == ನಿಧನ == 'ಬೈಲೂರ್ ಬಾಲಚಂದ್ರರಾಯರು' (೭೬ ವರ್ಷ) ಅಕ್ಟೋಬರ್ ೧೮, ೨೦೨೦ ರ, ರವಿವಾರ ಬೆಳಿಗ್ಯೆ ತೀವ್ರ ಹೃದಯಾಘಾತದಿಂದ ನವಿ ಮುಂಬಯಿನ ಸಿ.ಬಿ.ಡಿ.ಬೇಲಾಪುರ್ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. == ಉಲ್ಲೇಖಗಳು ==